ಆರು ಬಲ್ಲರು ಹರಿ ಹರರ ಮಹಿಮೆಯನು

ರಚನೆಕಾರ: ಕನಕದಾಸರು

ವರ್ಗ: ವಿಷ್ಣು

ಆರು ಬಲ್ಲರು ಹರಿ ಹರರ ಮಹಿಮೆಯನು
ವಾರಿಜೋದ್ಭವ ಸುರೇಂದ್ರಾದಿಗಳಿಗವಲ್ಲ || ಪ ||

ಪೌರತ್ರಯವ ಗೆಲುವ ಸಮಯದಲಿ ತಪವಮಾಡಿ
ನಾರಾಯಣಾಸ್ತ್ರವನು ಪಡೆದನೀತ
ಗೌರಿಮನೋಹರನ ಘನತರಾರ್ಚನೆಗೈದು
ಚಾರುತರ ಚಕ್ರವನು ಪಡೆದನಾ ಶೌರಿ || ೧ ||

ಬಲಿ ಚಕ್ರವರ್ತಿ ಭಕ್ತಿಗೆ ಮೆಚ್ಚಿ ಅವನ ಬಾ-
ಗಿಲ ಕಾಯ್ದನಚ್ಯುತನು ಅನುಗಾಲದಿ
ಬಲಭುಜನು ಬಾಣಾಸುರನ ಗೃಹದ್ವಾರವನು
ಬಳಸಿ ಕಾಯ್ದನು ಹರನು ವರವ ತಾನಿತ್ತು || ೨ ||

ಭೋಗಿಶಯನನು ಆಗಿ ಭೋಗಿಭೂಷಣನಾಗಿ
ವಾಗೀಶನಾಗಿ ಸೃಷ್ಟಿ ಸ್ಥಿತಿ ಲಯಗಳಿಂಗೆ
ಆಗು ಕಾರಣ ಕಾರ್ಯ ಕರ್ಮಾದಿ ರೂಪಕ್ಕೆ
ಕಾಗಿನೆಲೆಯಾದಿಕೇಶವನ ಮಹಿಮೆಯನು || ೩ ||