ದಾಸನಾಗು ವಿಶೇಷನಾಗು

ರಚನೆಕಾರ: ಕನಕದಾಸರು

ವರ್ಗ: ಶ್ರೀಕೃಷ್ಣ

ದಾಸನಾಗು ವಿಶೇಷನಾಗು || ಪ ||

ಏಸು ಕಾಯಂಗಳ ಕಳೆದು ಎಂಬತ್ನಾಲ್ಕು ಲಕ್ಷ
ಜೀವರಾಶಿಯನ್ನು ದಾಟಿ ಬಂದ ಈ ಶರೀರ
ತಾನಲ್ಲ ತನ್ನದಲ್ಲ ತಾನಲ್ಲ ತನ್ನದಲ್ಲ
ಆಸೆ ಥರವಲ್ಲ ಮುಂದೆ ಬಾಹೊದಲ್ಲ
ದಾಸನಾಗು ವಿಶೇಷನಾಗು ದಾಸನಾಗು ವಿಶೇಷನಾಗು || ಅ.ಪ ||

ಆಶ-ಕ್ಲೇಶ-ದೋಷವೆಂಬ ಅಬ್ಧಿಯೊಳು ಮುಳುಗಿ ಯಮನ
ಪಾಶಕ್ಕೊಳಗಾಗದೆ ನಿರ್ದೋಷಿಯಾಗು ಸಂತೋಷಿಯಾಗು
ಕಾಶಿ ವಾರಣಾಸಿ ಕಂಚಿ ಕಾಳಹಸ್ತಿ ರಾಮೇಶ್ವರ
ಏಸು ದೇಶ ತಿರುಗಿದರೆ ಬಾಹೊದೇನೋ ಅಲ್ಲಿ ಹೋದೇನೋ
ದೋಷನಾಶಿ ಕೃಷ್ಣೆ ಗಂಗೆ ಗೋದಾವರಿ ಭವನಾಶಿ
ತುಂಗಭದ್ರೆ ಯಮುನೆ ವಾಸದಲ್ಲಿ ಉಪವಾಸದಲ್ಲಿ
ಮೀಸಲಾಗಿ ಮಿಂದು ಜಪ ತಪ ಹೋಮ ನೇಮಗಳ
ಏಸು ಬಾರಿ ಮಾಡಿದರೆ ಫಲವೇನು? ಈ ಛಲವೇನು?
ದಾಸನಾಗು ವಿಶೇಷನಾಗು ದಾಸನಾಗು ವಿಶೇಷನಾಗು || ೧ ||

ಅಂದಿಗೋ ಇಂದಿಗೋ ಒಮ್ಮೆ ಸಿರಿಕಮಲೇಶನನ್ನು
ಒಂದು ಬಾರಿಯಾರು ಹಿಂದೆ ನೆನೆಯಲಿಲ್ಲ ಮನ ದಣಿಯಲಿಲ್ಲ
ಬಂದು ಬಂದು ಭ್ರಮೆಗೊಂಡು ಮಾಯಾಮೋಹಕ್ಕೆ ಸಿಕ್ಕಿ
ನೊಂದು ಬೆಂದು ಒಂದರಿಂದ ಉಳಿಯಲಿಲ್ಲ ಬಂಧ ಕಳೆಯಲಿಲ್ಲ
ಸಂದೇಹವ ಮಾಡದಿರು ಅರಿವೆಂಬ ದೀಪವಿಟ್ಟು
ಇಂದು ಕಂಡ್ಯ ದೇಹದಲ್ಲಿ ಪಿಂಡಾಂಡ ಹಾಗೆ ಬ್ರಹ್ಮಾಂಡ
ಇಂದು ಹರಿಯ ಧ್ಯಾನವನ್ನು ಮಾಡಿ ವಿವೇಕದಿ
ಮುಕುಂದನಿಂದ ಮುಕ್ತಿ ಬೇಡು ಕಂಡ್ಯ ನೀ ನೋಡು ಕಂಡ್ಯ
ದಾಸನಾಗು ವಿಶೇಷನಾಗು ದಾಸನಾಗು ವಿಶೇಷನಾಗು || ೨ ||

ನೂರು ಬಾರಿ ಶರಣು ಮಾಡಿ ನೀರ ಮುಳುಗಲ್ಯಾಕೆ
ಪರನಾರಿಯರ ನೋಟಕೆ ಗುರಿಯ ಮಾಡಿದಿ ಮನ ಸೆರೆಯ ಮಾಡಿದಿ
ಸುರೆಯೊಳು ಸುರೆ ತುಂಬಿ ಮೇಲೆ ಹೂವಿನ ಹಾರ
ಗೀರು ಗಂಧ ಅಕ್ಷತೆಯ ಧರಿಸಿದಂತೆ ನೀ ಮೆರೆಸಿದಂತೆ
ಗಾರುಡಿಯ ಮತ ಬಿಟ್ಟು ನಾದಬ್ರಹ್ಮನ ಪಿಡಿದು
ಸಾರಿ ಸೂರಿ ಮುಕ್ತಿಯನ್ನು ಶಮನದಿಂದ ಮತ್ತೆ ಸುಮನದಿಂದ
ನಾರಾಯಣ ಅಚ್ಯುತ ಅನಂತಾದಿಕೇಶವನ
ಸಾರಾಮೃತವನುಂಡು ಸುಖಿಸೋ ಲಂಡ ಜೀವವೇ ಎಲೋ ಭಂಡ ಜೀವವೇ
ದಾಸನಾಗು ವಿಶೇಷನಾಗು ದಾಸನಾಗು ವಿಶೇಷನಾಗು || ೩ ||