ಎಲ್ಯಾಡಿ ಬಂದ್ಯೋ ನೀ ಹೇಳಯ್ಯ

ರಚನೆಕಾರ: ಶ್ರೀಪಾದರಾಜರು

ವರ್ಗ: ಶ್ರೀಕೃಷ್ಣ

ಎಲ್ಯಾಡಿ ಬಂದ್ಯೋ ನೀ ಹೇಳಯ್ಯ
ನಿಲ್ಲು ನಿಲ್ಲು ಗೋಪಾಲ ಕೃಷ್ಣಯ್ಯ || ಪ ||

ನೊಸಲಲ್ಲಿ ಕಿರುಬೆವರಿಟ್ಟಿದೆ ಅಲ್ಲಿ
ಹೊಸಪರಿ ಸುದ್ದಿಯು ಹುಟ್ಟಿದೆ
ಪುಸಿಯಲ್ಲ ಈ ಮಾತು ನಿನ್ನ
ನಸುನಗೆ ಕೀರ್ತಿ ಹೆಚ್ಚಿದೆ || ೧ ||

ಬೆರಳ ಉಂಗುರವೆಲ್ಲಿ ಹೋಗಿದೆ ನಿನ್ನ
ಕೊರಳ ಪದಕವೆಲ್ಲಿ ನೀಗಿದೆ
ಸರಕೆಲ್ಲ ಅವಳಲ್ಲಿ ಸಾಗಿದೆ ಆ
ತರುಣಿ ಮಹಿಮೆ ಹೀಂಗಾಗಿದೆ || ೨ ||

ಕಳ್ಳತನವ ಹೀಗೆ ಮಾಡಿದೆ ನಿನ್ನ
ಸುಳ್ಳು ಕಡೆಗೆ ನಾ ನೋಡಿದೆ
ಎಲ್ಲರಿಗೂ ಠಕ್ಕು ಮಾಡಿದೆ
ಚಲುವ ರಂಗವಿಠಲ ನಗೆಗೀಡಾದೆ || ೩ ||