ಏನು ಇಲ್ಲದ ಎರಡು ದಿನದ ಸಂಸಾರ

ರಚನೆಕಾರ: ಕನಕದಾಸರು

ವರ್ಗ: ಉಪದೇಶಾತ್ಮಕ

ಏನು ಇಲ್ಲದ ಎರಡು ದಿನದ ಸಂಸಾರ
ಜ್ಞಾನದಲಿ ದಾನಧರ್ಮವ ಮಾಡಿರಯ್ಯ || ಪ ||

ಹಸಿದು ಬಂದವರಿಂಗೆ ಅಶನವೀಯಲುಬೇಕು
ಶಿಶುವಿಂಗೆ ಪಾಲ್ಬೆಣ್ಣೆಯನು ನಡೆಸಬೇಕು
ಹಸನಾದ ಭೂಮಿಯನು ಧಾರೆಯೆರೆಯಲುಬೇಕು
ಭಾಷೆ ಕೊಟ್ಟ ಬಳಿಕ ನಿಜವಿರಲು ಬೇಕು || ೧ ||

ಕಳ್ಳತನಗಳ ಮಾಡಿ ಒಡಲು ಹೊರೆಯಲು ಬೇಡ
ಠೌಳಿಗಾರನು ಆಗಿ ತಿರುಗಬೇಡ
ಕುಳ್ಳಿರ್ದ ಸಭೆಯೊಳಗೆ ತಿತ್ಯವ ನಡೆಸಬೇಡ
ಒಳ್ಳೆಯವನೆಂಬ ಉಬ್ಬಲು ಬೇಡ ಮನುಜ || ೨ ||

ದೊರೆತನವು ಬಂದಾಗ ಕೆಟ್ಟು ನುಡಿಯಲು ಬೇಡ
ಸಿರಿ ಬಂದ ಕಾಲಕ್ಕೆ ಮೆರೆಯಬೇಡ
ಸಿರಿವಂತನಾದರೇ ನೆಲೆಯಾದಿಕೇಶವನ
ಚರಣಕಮಲವ ಸೇರಿ ಸುಖಿಯಾಗು ಮನುಜ || ೩ ||