ವನಜನಯನನ ಮನವ ಮಧುಪ

ರಚನೆಕಾರ: ಶ್ರೀಪಾದರಾಜರು

ವರ್ಗ: ಶ್ರೀಕೃಷ್ಣ

ವನಜನಯನನ ಮನವ ಮಧುಪ ನಂಬುವರೆ
ಮನದೆಗೆದ ಮದನಪಿತ ವಿಠಲರೇಯಾ || ಪ ||

ಅರಿಯದ ಬಾಲೇರಿಗೆ ತನ್ನ ಪರಿಯನರುಹಿಸಿ ಮುನ್ನ
ನೆರೆದು ರತಿಪತಿಯ ಸುಖ ನೆರೆದೋರಿದ
ತೊರೆದು ಬದುಕುವೆವೆಂತೋ ರತಿಪತಿಯ ಪಿತನಗಲಿ
ವಿರಹದುರಿ ತಾನಳವಡರಿ ಸುಡುತಿಹುದು || ೧ ||

ನಡೆ ನಗೆಯ ತುದಿನೋಟ ಬಲೆಯನೆಮ್ಮೊಳು ಬೀಸಿ
ಬಿಡದೆ ಯೆಮ್ಮನು ತನ್ನ ವಶಮಾಡಿದ
ಪಡಿಯಿಲ್ಲದನುಭವದ ಸುಖದ ಸವಿಯನೆ ತೋರಿ
ಮಡದಿ ತಡೆದಳೊ ಮಧುರೆಯಲಿ ನಲ್ಲನ || ೨ ||

ಎಂದೆಂದು ನಿಮ್ಮ ವಶದಲ್ಲಿಹೆನೆಂದಭಯವಿತ್ತು
ಇಂದುಮುಖಿ ನಾರಿಯರ ನೆರೆ ನಂಬಿಸಿ
ನಂದನಂದನ ನಮ್ಮ ಕಾನನದೊಳೀಡ್ಯಾಡಿ
ಇಂದು ಮಧುರೆಯ ನಾರಿಯರ ನೆಚ್ಚಿದ || ೩ ||

ಇವನ ವಚನದ ಕಪಟ ತಿಳಿಯಲರಿಯದೆ ನಾವು
ನವ ಹರಿಣಿಯಂತೆ ಮರುಳಾಗಿ ಕೇಳಿ
ವಿವರವರಿಯದೆ ನಾವು ಕಡು ನೊಂದೆವೆಲೊ ಮಧುಪ
ಇವನ ಗುಣವರಿಯದೆ ಕಡುಕರುಣಿ ಎಂಬುವರು || ೪ ||

ಪತಿಸುತರ ಭವ ಬಂಧನಗಳೆಲ್ಲ ಈಡ್ಯಾಡಿ
ಗತಿ ನಮಗೆ ಅವನೆಂದು ಮನಸೋತೆವೋ
ಕೃತಕವರಿಯದೆ ನಮ್ಮ ವನದೊಳು ನಿಲ್ಲಿಸಿ ಪೋದ
ಪತಿಯೊಡನೆ ಸಂಧಾನವೆಂತೊ ಎಲೊ ಮಧುಪ || ೫ ||

ಮರುಳುಗಳು ನಾವು ಶ್ರೀಪತಿಯ ಕೂಟವ ಬಯಸಿ
ಇರುಳು ಹಗಲು ಜರಿಜರಿದಳಲುವೆವು
ಸಿರಿಯವನ ಉಂಗುಟದ ಉಗುರು ಗುಣ ಕಾಣಳೆಲೋ
ಹರಿ ನಮ್ಮ ನೆನೆವುದಚ್ಚರಿಯಲ್ಲವೆ || ೬ ||

ತುಂಗಗುಣನಿಲಯ ಅಂಗಜನ ಪಿತನೆಂದು
ರಂಗನಿಗೆ ಮನಸೋತು ಮರುಳಾದೆವೋ
ಹಿಂಗಿ ಬದುಕುವುದೆಂತೋ ಭೃಂಗ ಮಧುರೆಗೆ ಪೋಗಿ
ರಂಗವಿಠಲನ ತಂದೆಮ್ಮನುಳುಹುವುದೋ || ೭ ||