ವರಕವಿಗಳ ಮುಂದೆ

ರಚನೆಕಾರ: ಕನಕದಾಸರು

ವರ್ಗ: ಉಪದೇಶಾತ್ಮಕ

ವರಕವಿಗಳ ಮುಂದೆ ನರಕವಿಗಳು ವಿದ್ಯೆ ಮಾಡಬಾರದು, ಈ
ಧರಣಿಯ ಕಲ್ಲಿಗೆ ಶರಣೆಂದು ಪೂಜೆಯ ಮಾಡಬಾರದು || ಪ ||

ಪಾಪಿಗಳಿದ್ದಲ್ಲಿಗೆ ರೂಪುಳ್ಳ ವಸ್ತುವ ತೋರಬಾರದು, ಬಹು
ಕೋಪಿಗಳಿದ್ದಲ್ಲಿ ಅನುಭವ ಗೋಷ್ಠಿಯ ಮಾಡಬಾರದು || ೧ ||

ಅಡಿಸತ್ತ ಮಡಕೆಗೆ ಜೋಡಿಸಿ ಒಲೆಗುಂಡ ಹೂಡಬಾರದು, ಅತಿ
ಬಡತನ ಬಂದಾಗ ನೆಂಟರ ಬಾಗಿಲ ಸೇರಬಾರದು || ೨ ||

ಹರಿಯ ಜರೆದು ಹರ ಘನನೆಂದು ನರಕಕ್ಕೆ ಸೇರಬಾರದು, ತಾ
ಪರರನ್ನು ಬೈದು ಪಾತಕಕೆ ಮುನ್ನೊಳಗಾಗಬಾರದು || ೩ ||

ಮಡದಿ ನುಡಿಯ ಕೇಳಿ ಜಗಳಕೊಬ್ಬರ ಕೂಡೆ ಹೋಗಬಾರದು, ಬಾ-
ಯ್ಬಡಕರು ಇದ್ದಲ್ಲಿ ವಸ್ತಿ ಬಿಡಾರವ ಮಾಡಬಾರದು || ೪ ||

ಮುಂದೆ ಭಲಾ ಎಂದು ಹಿಂದೆ ನಿಂದಿಪರನ್ನು ಕೂಡಬಾರದು, ಬಾಡ-
ದಾದಿಕೇಶವನ ಚರಣದ ಸ್ಮರಣೆಯ ಮರೆಯಬಾರದು || ೫ ||