ಯಾರೇ ಬಂದವರು

ರಚನೆಕಾರ: ಪುರಂದರದಾಸರು

ಗಾಯನ: ಶಶಿಕಾಂತ ರಾವ್

ವರ್ಗ: ಶ್ರೀಕೃಷ್ಣ

ಯಾರೇ ಬಂದವರು ಮನೆಗೆ ಮ-
ತ್ಯಾರೇ ಬಂದವರು || ಪ ||

ನಾರಾಯಣ ಕೃಷ್ಣನಾಥನಲ್ಲದೆ ಬೇರೆ || ಅ.ಪ ||

ವಜ್ರರೇಖೆಗಳಿವೆ ಮನೆಯಲ್ಲಿ, ಕಾಲ
ಗೆಜ್ಜೆ ಧ್ವನಿ ಕೇಳಿ ಬರುತಿದೆ
ವಜ್ರಮಾಣಿಕ್ಯವೆಲ್ಲ ಹರಿದು ಬಿದ್ದಿವೆ
ಮಜ್ಜಿಗೆಯೊಳಗೆ ಕಾಣ್ವ ಬೆಣ್ಣೆಯ ಕಾಣೆ || ೧ ||

ಕೊಂಬು ಕೊಳಲು ರಭಸಗಳಿವೆ, ಕ-
ದಂಬ ಕಸ್ತೂರಿ ಪೆಂಪೆಸೆದಿವೆ
ಪೊಂಬಟ್ಟೆ ಚಲ್ಲಣ ಚೆಲ್ಲಿದೆ ಹಾಲು
ಕುಂಭ ಒಡೆದು ಮನೆ ತುಂಬ ಬೆಳ್ಳಗಾಯಿತು || ೨ ||

ಮಿಂಚು ಹುಳದಂತೆ ಹೊಳೆವುತ, ತಮ್ಮ
ಸಂಚರರೊಡಗೂಡಿ ಚಲಿಸುತ್ತ
ವಂಚಿಸಿ ಬೆಣ್ಣೆಯ ಮೆಲ್ಲುತ, ನಮ್ಮ
ಲಂಚದ ಪುರಂದರವಿಠಲನಲ್ಲದೆ ಬೇರೇ || ೩ ||